ನವದೆಹಲಿ: ಬಾಲಕಾರ್ಮಿಕ ಪದ್ಧತಿ, ಮಕ್ಕಳ ಕಳ್ಳಸಾಗಣೆ ಹಾಗೂ ಶೋಷಣೆ ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ನಡೆಸಿದ ವಿಶೇಷ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ 3,800ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ.
‘ಪ್ಯಾನ್-ಇಂಡಿಯಾ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಷನ್’ ಹೆಸರಿನಲ್ಲಿ ಜೂನ್ 12ರಿಂದ ಆಗಸ್ಟ್ 31ರವರೆಗೆ ನಡೆದ ಅಭಿಯಾನದಲ್ಲಿ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲಾಧಿಕಾರಿಗಳು, ಕಾರ್ಮಿಕ ಇಲಾಖೆ, ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ಸಹಕರಿಸಿದವು.
ಬಾಲಕಾರ್ಮಿಕ ಹಾಗೂ ಮಕ್ಕಳ ಕಳ್ಳಸಾಗಣೆ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಗುರಿಯಾಗಿಸಿಕೊಂಡು ರಕ್ಷಣಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವಂತೆ ಎನ್ಸಿಪಿಸಿಆರ್ ಅಧಿಕಾರಿಗಳಿಗೆ ಸೂಚಿಸಿತ್ತು. ರಕ್ಷಿಸಲಾದ ಮಕ್ಕಳ ಸಂಖ್ಯೆ, ದಾಖಲಾದ ಎಫ್ಐಆರ್ಗಳು, ಪುನರ್ವಸತಿ ಕ್ರಮಗಳು, ಕುಟುಂಬಗಳಿಗೆ ಮರುಸ್ಥಾಪನೆ, ಶಿಕ್ಷಣಕ್ಕೆ ಮರುಸೇರ್ಪಡೆ ಹಾಗೂ ಪರಿಹಾರಧನದ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆಯೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿತ್ತು.

ಅಭಿಯಾನದ ಅನುಷ್ಠಾನ ಪರಿಶೀಲಿಸಲು ಎನ್ಸಿಪಿಸಿಆರ್ ಜಿಲ್ಲಾ ಆಡಳಿತಗಳೊಂದಿಗೆ ಸಭೆ ನಡೆಸಿ, ಕಾರ್ಯಾಚರಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಕೈಗೊಂಡ ಕ್ರಮಗಳ ವರದಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಕುರಿತು ಒತ್ತು ನೀಡಿತು. ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ನಡುವೆ ಸಮನ್ವಯ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಯಿತು.
ಬಾಲಕಾರ್ಮಿಕ ಪದ್ಧತಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಸಂವಹನ ವೇದಿಕೆಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಬಾಲಕಾರ್ಮಿಕ ಪ್ರಕರಣಗಳನ್ನು ವರದಿ ಮಾಡುವ ವ್ಯವಸ್ಥೆ ಹಾಗೂ ರಕ್ಷಿಸಲಾದ ಮಕ್ಕಳ ಪುನರ್ವಸತಿ ಮತ್ತು ಶಿಕ್ಷಣಕ್ಕೆ ಮರುಸೇರ್ಪಡೆಯ ಮಹತ್ವವನ್ನು ಒತ್ತಿ ಹೇಳಲಾಯಿತು.
ಅಭಿಯಾನದ ಅವಧಿಯಲ್ಲಿ 3,800ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದ್ದು, ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 575ಕ್ಕೂ ಅಧಿಕ ಎಫ್ಐಆರ್ಗಳು ದಾಖಲಾಗಿವೆ ಎಂದು ಎನ್ಸಿಪಿಸಿಆರ್ ತಿಳಿಸಿದೆ.
ಮಕ್ಕಳನ್ನು ಶೋಷಣೆಯ ಕೆಲಸದಿಂದ ರಕ್ಷಿಸುವುದಷ್ಟೇ ಅಲ್ಲದೆ, ಅವರಿಗೆ ಪುನರ್ವಸತಿ, ರಕ್ಷಣೆ ಒದಗಿಸಿ ಶಿಕ್ಷಣದ ಮುಖ್ಯವಾಹಿನಿಗೆ ಹಾಗೂ ಸಮಾಜಕ್ಕೆ ಮರುಸೇರ್ಪಡೆಗೊಳಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು ಎಂದು ಆಯೋಗ ತಿಳಿಸಿದೆ.


