ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಯ ವಿಭಾಗದಲ್ಲಿ ನೇರ ಪಾವತಿಯಡಿ (ಡಿಪಿಎಸ್) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳ ಪೈಕಿ ರೋಸ್ಟರ್ / ಮೀಸಲಾತಿ ನಿಯಮಾವಳಿಗಳನ್ವಯ 12,692 ಪೌರಕಾರ್ಮಿಕರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ: 16-11-2024 ರಂದು ಪ್ರಚುರಪಡಿಸಲಾಗಿರುತ್ತದೆ.
ಸದರಿ ಪೌರಕಾರ್ಮಿಕ ಅಭ್ಯರ್ಥಿಗಳ ಸಿಂಧುತ್ವ ಪರಿಶೀಲನೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆಯುವ ಸಲುವಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಈಗಾಗಲೇ ಅರ್ಜಿಗಳನ್ನು ಸಲ್ಲಿಸಲಾಗಿರುತ್ತದೆ.
ಸೇವಾ ಸಿಂಧು ಅರ್ಜಿದಾರರ ಪ್ರಮಾಣ ಪತ್ರ ಪೋರ್ಟಲ್ ನಲ್ಲಿ ಪ್ರಮಾಣ ಪತ್ರ-1, ಪ್ರಮಾಣ ಪತ್ರ-2 ಮತ್ತು ಇನ್ನಿತರೇ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗಿರುವ ಅವಶ್ಯಕತೆಯಿರುತ್ತದೆ. ತತ್ಸಂಬಂಧ ಪ್ರಮಾಣ ಪತ್ರ-1 ಮತ್ತು ಪ್ರಮಾಣ ಪತ್ರ-2 ಗಳನ್ನು ಸಿದ್ಧಪಡಿಸಲು ತಗಲುವ ವೆಚ್ಚವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದಲೇ ಭರಿಸಲು ಮಾನ್ಯ ಮುಖ್ಯ ಆಯುಕ್ತರು ತೀರ್ಮಾನಿಸಿರುತ್ತಾರೆ.
ಆದ್ದರಿಂದ, ಸದರಿ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ, ಅಪ್ಲೋಡ್ ಮಾಡಲು ಯಾವುದೇ ಆಮೀಷಗಳಿಗೆ ಒಳಗಾಗಬಾರದೆಂದು ಪೌರಕಾರ್ಮಿಕ ಹುದ್ದೆಗೆ ಆಯ್ಕೆಯಾಗಿರುವ, ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿರುವ ಅಭ್ಯರ್ಥಿಗಳಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತರು ಹಾಗೂ ಪೌರಕಾರ್ಮಿಕರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ನವೀನ್ ಕುಮಾರ್ ರಾಜು ರವರು ಮನವಿ ಮಾಡಿದ್ದಾರೆ.




