ಅಂಬೇಡ್ಕರ್ ವಿಚಾರಧಾರೆ ಅನುಷ್ಠಾನ ಇಂದು ಅತ್ಯಗತ್ಯ: ಪ್ರೊ.ಶ್ರೀಕಂಠಕೂಡಿಗೆ

ಶಿವಮೊಗ್ಗ: ವರ್ಣವ್ಯವಸ್ಥೆಯ ಮಾಲಿನ್ಯವನ್ನು ತೊಳೆದವರು ಡಾ.ಅಂಬೇಡ್ಕರ್. ಬೌದ್ಧಿಕವಾಗಿ ನಾಶವಾಗುತ್ತಿರುವ ಈ ಕಾಲದಲ್ಲಿ ಅವರ ವಿಚಾರಗಳನ್ನು ಮನನ ಮಾಡಿ, ಅನುಷ್ಠಾನಕ್ಕೆ ತರುವ ಅಗತ್ಯತೆ ಇದೆ ಎಂದು ಖ್ಯಾತ ವಿಚಾರವಾದಿ ಪ್ರೊ.ಶ್ರೀ ಕಂಠಕೂಡಿಗೆ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಪದವಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಸಮಗ್ರ ಅಭಿವೃದ್ಧಿ ಎಂಬ ರಾಜ್ಯ ಮಟ್ಟದ ಕಾರ್ಯಾಗಾರವನ್ನ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ವಿಚಾರಗಳು ಬರೀ ಜಾಹಿರಾತು ಮತ್ತು ಪ್ರಚಾರಕ್ಕೆ ಸೀಮಿತವಾಗದೆ, ವೈಯಕ್ತಿಕವಾಗಿ ದೇಶದ ಪ್ರತಿಯೊಬ್ಬ ಪ್ರಜೆ ಅನುಸರಿಸುವಂತಾಗಬೇಕು. ಅದರಲ್ಲೂ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಧ್ಯಾಪಕರುಗಳು ಅಂಬೇಡ್ಕರ್ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ.

ಪ್ರೊ.ಕುಮಾರಚಲ್ಯ ಮಾತನಾಡಿ, ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವುದೆ ವೈಚಾರಿಕತೆ. ಇಂದು ಸುಳ್ಳಿನ ಭಯೋತ್ಪಾದಕರುಗಳಿಂದ ಸುಧಾರಣೆ ತರಲಾಗುತ್ತಿಲ್ಲ. ಅಂತಃಕರಣ ಇಂದು ಸತ್ತು ಹೋಗಿದೆ. ಸುಧಾರಕರು ಬೆನ್ನ ಹಿಂದಿನ ಬೆಳಕುಗಳು. ಹಿಂದಿರುಗಿ ನೋಡಿದಾಗ ಬೆಳಕುಗಳು ಕಾಣುತ್ತವೆ. ಪ್ರತಿಷ್ಟೆಗಾಗಿ ಸುಧಾರಕರನ್ನು ನೆನಪು ಮಾಡಿಕೊಳ್ಳುವುದಲ್ಲ ಎಂದರು.

ಪ್ರೊ. ಹೂವಯ್ಯಗೌಡರ, ಪ್ರೊ.ಎ.ಬಿ.ರಾಮಚಂದ್ರಪ್ಪ, ಪ್ರೊ.ಹಿರೇಮಣಿನಾಯ್ಕ್, ಪ್ರೊ.ಕೆ. ಆರ್.ಮಂಜುನಾಥ್, ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ವಿವಿಧ ಕಾಲೇಜುಗಳ ಅಧ್ಯಾಪಕರು ಉಪಸ್ಥಿತರಿದ್ದರು.