ದಕ್ಷಿಣ ಕನ್ನಡ: ರಾಜೀನಾಮೆ ಕೊಡೋರು ಯಾವುತ್ತೂ ಕಂಡಿಷನ್ ಹಾಕೋದಿಲ್ಲ ಎಂಬುದಾಗಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರದಲ್ಲಿ ನನ್ನ ವಿರುದ್ಧ ನಿಂತು ಗೆದ್ದು ನೋಡು ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಶಿವಾನಂದ ಪಾಟೀಲ್ ಗೆ ಸವಾಲ್ ಹಾಕಿದ್ದರು. ಈ ಸವಾಲು ಸ್ವೀಕರಿಸಿದ್ದಂತ ಸಚಿವ ಶಿವಾನಂದ ಪಾಟೀಲ್ ಅವರು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ಶಿವಾನಂದ ಪಾಟೀಲ್ ರಾಜೀನಾಮೆ ಪತ್ರದಲ್ಲಿ ಏನಿದೆ.?
ವಿಜಯಪುರ ನಗರ ಶಾಸಕ ಬಸನಗೌಡ ಆರ್ ಪಾಟೀಲ್ ಅಂದರೆ ಯತ್ನಾಳ್ ಅವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ.
ನಾನು ಅವರ ಸವಾಲನ್ನು ಸ್ವೀಕರಿಸಿದ್ದೇನೆ. ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹೀಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದಿದ್ದರು.
ಇನ್ನೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೇ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ಮನವಿ ಮಾಡಿದ್ದರು.
ಶಾಸಕ ಯತ್ನಾಳ್ ಮೊದಲ ರಿಯಾಕ್ಷನ್ ಇದು..
ಈ ರಾಜೀನಾಮೆ ಪ್ರಹಸನದ ಕುರಿತಂತೆ ಪ್ರತಿಕ್ರಿಯಿಸಿರುವಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ರಾಜೀನಾಮೆ ಕೊಡುವವರು ಯಾವತ್ತೂ ಕಂಡಿಷನ್ ಹಾಕಲ್ಲ. ಎರಡು ಲೈನ್ ನಲ್ಲಿ ರಾಜೀನಾಮೆ ಪತ್ರ ಬರೆದು ಸಲ್ಲಿಸುತ್ತಾರೆ. ಕಂಡಿಷನ್ ಹಾಕಿ ರಾಜೀನಾಮೆ ಕೊಡುವುದು ಮೂರ್ಖತನ ಎಂಬುದಾಗಿ ಹೇಳಿದ್ದಾರೆ.
ಇಷ್ಟು ಉದ್ದದ ರಾಜೀನಾಮೆ ಪತ್ರ ಬರೆದು ಎಂದಾದ್ರೂ ಕೊಟ್ಟಿದ್ದಾರಾ? ಶಿವಾನಂದ ಪಾಟೀಲ್ ಗೆ ಮಾನ ಮರ್ಯಾದೆ ಏನೂ ಇಲ್ಲ. ಅದು ದಡ್ಡತನ. ಮರ್ಯಾದೆ ಇಲ್ಲದವನು ಮಾಡುವ ಕೆಲಸವನ್ನ ಅವರು ಮಾಡಿದ್ದಾರೆ. ನಾನು ನನ್ನ ನಿರ್ಧಾರವನ್ನ ಶುಕ್ರವಾರ ತಿಳಿಸುತ್ತೇನೆ ಎಂದರು.




