ಬೆಂಗಳೂರು: ಬೆಂಗಳೂರಿನಾದ್ಯಂತ ನಿನ್ನೆ ದಿನಾಂಕ: 01-05-2025 ರಂದು ಸಂಜೆ ಸುರಿದ ಮಳೆಗೆ ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಕತ್ರಿಗುಪ್ಪೆ ಗೋ-ಗ್ಯಾಸ್ ಬಂಕ್ನ ಸಮೀಪ ನಿಂತಿದ್ದ ಆಟೋ ಹಾಗೂ ಎರಡು ಕಾರುಗಳ ಮೇಲೆ ಒಂದು ಬೃಹತ್ ಮರವು ಮುರಿದು ಬಿದ್ದ ಪರಿಣಾಮ ಶ್ರೀ ಮಹೇಶ್ ಸುಮಾರು 40 ವರ್ಷ ಇವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಮುಂದುವರಿದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿರುತ್ತಾರೆ. ಗಾಳಿ ಮಳೆಗೆ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಸುಮಾರು 23 ಮರಗಳು ಹಾಗೂ 52 ಬೃಹತ್ ರೆಂಬೆಗಳು ಬಿದ್ದಿರುವುದು ವರದಿಯಾಗಿರುತ್ತದೆ. ಅರಣ್ಯ ಘಟಕವು ಆಯಾ ವಲಯಗಳ ಅಧಿಕಾರಿಗಳೊಂದಿಗೆ ಜೊತೆಗೂಡಿ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಲಾಗಿರುತ್ತದೆ.
ಅರಣ್ಯ ವಿಭಾಗದ ವಿಷೇಶ ಆಯುಕ್ತರು, ಮತ್ತು ವಲಯ ಆಯುಕ್ತರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿ ಜೊತೆಗೂಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿರುತ್ತಾರೆ.
ಮುಂಜಾಗ್ರತೆ ಕ್ರಮವಾಗಿ ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಗಳಲ್ಲಿ ಓಡಾಡುವುದು, ಬೃಹತ್ ಮರಗಳ ಕೆಳಗಡೆ ನಿಲ್ಲದಂತೆ ಸಾರ್ವಜನಿಕರಲ್ಲಿ ಮುಂಜಾಗ್ರತೆ ಕ್ರಮ ವಹಿಸುವಂತೆ ಮನವಿ ಮಾಡಿದೆ.




