ಬೆಂಗಳೂರು: ದಕ್ಷಿಣ ವಲಯ ಬಸವನಗುಡಿ ವ್ಯಾಪ್ತಿಯ ಎಂ.ಎನ್ ಕೃಷ್ಣರಾವ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣದ ಮುಂಭಾಗದಲ್ಲಿರುವ ಪಾದಾಚಾರಿ ಮಾರ್ಗದಲ್ಲಿ ಸಾರುವೆ ಅಳವಡಿಸಿ ನಾಗರಿಕರ ಓಡಾಟಕ್ಕೆ ಸಮಸ್ಯೆ ಮಾಡಿದವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ದಕ್ಷಿಣ ವಲಯ ಎಂ.ಎನ್ ಕೃಷ್ಣರಾವ್ ರಸ್ತೆ ಸ್ವತ್ತಿನ ಸಂಖ್ಯೆ 16ರಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಸಾರುವೆ ಅಳವಡಿಸಿ ಅದಕ್ಕೆ ಗ್ರೀನ್ ನೆಟ್ ಹಾಕಿ ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುತ್ತಾರೆ. ಈ ಪೈಕಿ ಸಂಬಂಧಪಟ್ಟ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಿ ದುಪ್ಪಟ್ಟು ದಂಡ ವಿಧಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಸೂಚನೆ ನೀಡಿರುತ್ತಾರೆ.
ಅದರಂತೆ, ವಲಯ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿರುತ್ತಾರೆ. ಪರಿಶೀಲನೆಯ ವೇಳೆ ಪಾದಚಾರಿ ಮಾರ್ಗದಲ್ಲಿ ಸಾರುವೆ ಅಳವಡಿಸಿ, ಅದಕ್ಕೆ ಗ್ರೀನ್ ನೆಟ್ ಹಾಕಿ ನಾಗರಿಕರು ಓಡಾಡದ ಸ್ಥಿತಿ ಉಂಟಾಗಿರುತ್ತದೆ.
ಪಾದಚಾರಿ ಮಾರ್ಗದಲ್ಲಿ ಸಾರುವೆ ಅಳವಡಿಸಿರುವ ಪರಿಣಾಮ ನಾಗರಿಕರ ಓಡಾಟಕ್ಕೆ ಅನಾನುಕೂಲವಾಗಿರುತ್ತದೆ. ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ರಸ್ತೆ/ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸಾರುವೆ ಅಳವಡಿಸಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿರುತ್ತದೆ. ಆದ್ದರಿಂದ ಕಟ್ಟಡ ಮಾಲೀಕರಾದ ರಾಜೇಂದ್ರ ಕುಮಾರ್ ರವರಿಗೆ ಸೂಚನಾ ಪತ್ರ ನೀಡಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿರುವುದಕ್ಕೆ 1 ಲಕ್ಷ ರೂ. ದಂಡವನ್ನು ಪಾವತಿಸಲು ಸೂಚಿಸಲಾಗಿರುತ್ತದೆ.
ಮುಂದುವರಿದು, ಕಟ್ಟಡ ಮಾಲೀಕರು 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಪಾಲಿಕೆಯ ಮುಖ್ಯ ಆಯುಕ್ತರ ಹೆಸರಿಗೆ ನೀಡಿದ್ದು, ಮತ್ತೆ ಈ ರೀತಿ ಸಾರ್ವಜನಿಕರಿಗೆ ತೊಂದರೆ ಆಗುವ ಕೆಲಸ ಮಾಡದಿರಲು ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.




