ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ

ಶಿವಮೊಗ್ಗ : ಬಿರುಗಾಳಿ ಮತ್ತು‌ ಮಳೆಯಿಂದ ಹಾನಿಗೊಳಗಾದ ಅಡಿಕೆ, ತೆಂಗು ತೋಟ ಸೇರಿದಂತೆ ಬೆಳೆ ಹಾನಿಯಾದ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ತಕ್ಷಣವೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನಡ ನೀಡಿದರು.

ಮಂಗಳವಾರ ಬೆಳಿಗ್ಗೆ ಗಾಳಿ ಮಳೆ ಹಾನಿಗೊಳಗಾದ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಅರಹತೊಳಲು ಗ್ರಾಮದ ತೋಟಕ್ಕೆ ಭೇಟಿ ನೀಡಿ ಬಿರುಗಾಳಿ‌ ಮತ್ತು ಮಳೆಯಿಂದಾಗಿ ಧರೆಗುರುಳಿದ ಮರಗಳನ್ನು‌ ವೀಕ್ಷಿಸಿ, ಸಂತ್ರಸ್ತ ರೈತರೊಂದಿ ಮಾತನಾಡಿದರು.

ಬಿರುಗಾಳಿಗೆ ಧರೆಗುರುಳಿದ ಅಡಿಕೆ ಮರಗಳು, ಹಾನಿಗೊಳಗಾದ ಮನೆಗಳು ವೀಕ್ಷಿಸಿದರು. ಸಂತ್ರಸ್ತ ರೈತರು ಮತ್ತು ಸಾರ್ವಜನಿಕರೊಂದಿಗೆ ಮಾತನಾಡಿ ಅಹವಾಲು ಸ್ವೀಕರಿಸಿದರು.

ನಂತರ ಅರಹತೊಳಲು ವಡ್ಡರಹಟ್ಟಿಗೆ ತೆರಳಿ ಬಿರುಗಾಳಿಗೆ ಹಾನಿಗೊಳಗಾದ ಮನೆಗಳು, ಕೊಟ್ಟಿಗೆಗಳನ್ನು‌ ವೀಕ್ಷಿಸ, ಮನೆಯವರೊಂದಿಗೆ ಮಾತನಾಡಿ, ಅಧಿಕಾರಿಗಳ ಬಳಿ ನಷ್ಟದ ಕುರಿತು ಮಾಹಿತಿ ಪಡೆದುಕೊಂಡು, ತ್ವರಿತ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ಸೂಚನೆ ನೀಡುದರು.

ಮಲ್ಲಿಗೇನಹಳ್ಳಿ‌ ಗ್ರಾಮದ ಹಾನಿಗೊಳಗಾದ ಅಡಿಕೆ ತೋಟಗಳನ್ನು ವೀಕ್ಷಿಸಿ ತ್ವರಿತ ಪರಿಹಾರಕ್ಕೆ ಸೂಚನೆ: ಬಿರುಗಾಳಿ, ಮಳೆಗೆ ಹಾನಿಗೊಳಗಾದ ಬೆಳೆ ಮತ್ತು ಮನೆಗಳ ಮಹಜರ್ ನ್ನು ಶೀಘ್ರದಲ್ಲೇ ಕೈಗೊಂಡು ಸಲ್ಲಿಸಲು ತಿಳಿಸಿದ್ದೇನೆ. ವಿದ್ಯುತ್ ಕಡಿತವಾಗಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು ತಕ್ಷಣವೇ
ಕುಡಿಯುವ ನೀರು ಮತ್ತು 36 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂ‌ಗೆ ಸೂಚನೆ ನೀಡಿದ್ದೇನೆ ಅರಹತೊಳಲಿನಲ್ಲಿ ಓರ್ವ ವ್ಯಕ್ತಿ ಸಾವು ಆಗಿದ್ದು ಕಾರಣ ತಿಳಿದು ವರದಿ ನೀಡಲು ಸೂಚನೆ ನೀಡಿದ್ದೇನೆ. ನಷ್ಟದ ಕುರಿತು ಸಮಗ್ರ ವರದಿ ನೀಡುವಂತೆ ಕಂದಾಯ ಇಲಾಖೆ, ಗ್ರಾ.ಪಂ. ವಿಪತ್ತು ನಿರ್ವಹಣೆ ಇಲಾಖೆ ಸೇರಿದಂತೆ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು ಖುದ್ದಾಗಿ ಹಾನಿ‌ಗೆ ಪರಿಹಾರ ನೀಡುವ ಕುರಿತು‌ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ವಡ್ಡರಹಟ್ಟಿ ಭಾಗದ ಹಲವು ಮನೆಗಳಿಗೆ ಇದುವರೆಗೆ ಗ್ರಾ.ಪಂ. ಯಿಂದ ಹಕ್ಕುಪತ್ರ ಲಭ್ಯವಾಗಿಲ್ಲ ಹಕ್ಕು‌ಪತ್ರ ನೀಡುವಂತೆ ಮನವಿ‌ಮಾಡಿದ್ದು ಈ ಕುರಿತು ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಮಳೆಗಾಲದಲ್ಲಿ ಮನೆ ಸುತ್ತ ಮುತ್ತ ದುರ್ಬಲ‌ ಮರಗಳು, ಮನೆಗಳ ಶೀಟ್ ಚಾವಣಿಗಳ ಬಗ್ಗೆ ಸಾರ್ವಜನಿಕರು ಸಹ ಎಚ್ಚರಿಕೆ ವಹಿಸಬೇಕು. ಆಗ ಅದರಿಂದಾಗುವ ಅನಾಹುತ ತಪ್ಪಿಸಬಹುದೆಂದು ತಿಳಿಸಿದರು.

ಮಳೆಯಿಂದ ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಹಾನಿಯಾದ ರೈತರಿಂದ ಮಾಹಿತಿ‌ ಪಡೆದು ವರದಿ ತಯಾರಿಸಿ, ತಕ್ಷಣವೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಯಾವುದೇ ವಿಳಂಬವಿಲ್ಲದೆ ವೈಜ್ಞಾನಿಕವಾಗಿ ಹಾನಿ ಸಮೀಕ್ಷೆ ನಡೆಸಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು .

ಬಿರುಗಾಳಿಯಿಂದಾಗಿ ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಇದನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರ್ಕಾರವು ಸಂತ್ರಸ್ತರ ಪರವಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟಕ್ಕೆ ನಿಯಮಾನುಸಾರ ಗರಿಷ್ಠ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ತಳಮಟ್ಟದಲ್ಲಿ ಕೆಲಸ ಮಾಡಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು,” ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ(ಪ್ರ) ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿ ಸತ್ಯನಾರಾಯಣ, ತಹಶಿಲ್ದಾರರು, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.