ಮುಂಬೈ: ಗಣೇಶೋತ್ಸವದ ಸಂಭ್ರಮದ ನಡುವೆ ಮುಂಬೈನ ಲಾಲ್ಬಾಗ್–ಕಲಾಚೌಕಿ ಪ್ರದೇಶದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಭಾನುವಾರ ಮುಂಜಾನೆ ಸುಮಾರು 2.20ಕ್ಕೆ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ಕಲಾಚೌಕಿ ವಿಭಾಗ ಸಾರ್ವಜನಿಕ ಉತ್ಸವ ಮಂಡಳಿಯ ಗಣೇಶ ಮಂಟಪದ ಪ್ರವೇಶದ್ವಾರದ ಬಳಿ ಘಟನೆ ನಡೆದಿದೆ. ಗಣೇಶ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ವೇಳೆ ತಾತ್ಕಾಲಿಕ ಕುಡಿಯುವ ನೀರು ಹಾಗೂ ತಂಪು ಪಾನೀಯದ ಮಳಿಗೆಯ ಬಳಿ ವಿದ್ಯುತ್ ಪ್ರವಾಹ ಹರಿದಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಘಟನೆಯ ಬಳಿಕ ಗಾಯಾಳುಗಳನ್ನು ಬೈಕುಲ್ಲಾದ ಮಸೀನಾ ಆಸ್ಪತ್ರೆ ಹಾಗೂ ಪರೇಲ್ನ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಸೀನಾ ಆಸ್ಪತ್ರೆಯಲ್ಲಿ 8 ವರ್ಷದ ರಘಿನಿ ಘನಶ್ಯಾಮ್ ಯಾದವ್ ಮೃತಪಟ್ಟಿದ್ದರೆ, ಗ್ಲೋಬಲ್ ಆಸ್ಪತ್ರೆಯಲ್ಲಿ 33 ವರ್ಷದ ಸುಜಾತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 12 ವರ್ಷದ ಬಾಲಕಿ ರೂಹಿ ಸಿಂಗ್ ಸ್ಥಿತಿ ಗಂಭೀರವಾಗಿದ್ದು, ಇತರ ಮೂವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಮುಂಬೈ ಅಗ್ನಿಶಾಮಕ ದಳಕ್ಕೆ 2.42ಕ್ಕೆ ಮಾಹಿತಿ ಲಭಿಸಿದ್ದು, ಸಿಬ್ಬಂದಿ, ಪೊಲೀಸರು, BEST ಹಾಗೂ ನಾಗರಿಕ ವಾರ್ಡ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಿದರು.
ಘಟನಾ ಸ್ಥಳದಲ್ಲಿ ಹಬ್ಬದ ಬೆಳಕು ಹಾಗೂ ತಾತ್ಕಾಲಿಕ ಮಳಿಗೆಗಾಗಿ ಅಳವಡಿಸಿದ್ದ ಮೀಟರ್ ಮತ್ತು ವಿದ್ಯುತ್ ವ್ಯವಸ್ಥೆಯನ್ನು BEST ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸ್ಥಳೀಯ ಎಲೆಕ್ಟ್ರಿಷಿಯನ್ ತಾತ್ಕಾಲಿಕ ಮೀಟರ್ನ ವೈರಿಂಗ್ ಹಾಗೂ MCB ಸಂಪರ್ಕವನ್ನು ಕಡಿತಗೊಳಿಸಿದ್ದ ಸ್ಥಿತಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಿಖರ ಕಾರಣ ತಿಳಿಯಲು ಕಲಾಚೌಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿನ ತಾತ್ಕಾಲಿಕ ವಿದ್ಯುತ್ ಸಂಪರ್ಕ, MCB, ಅರ್ಥಿಂಗ್ ಹಾಗೂ ಕೇಬಲ್ ಸುರಕ್ಷತೆ ಕುರಿತು ತಪಾಸಣೆಗೆ ಒತ್ತು ನೀಡಲಾಗಿದೆ. ಭಾರಿ ಜನಸಂದಣಿ ಸೇರುವ ಉತ್ಸವ ಸ್ಥಳಗಳಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಮತ್ತೆ ಮುನ್ನೆಲೆಗೆ ಬಂದಿದೆ.



