ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ನಗರೀಕರಣದ ಪರಿಣಾಮವಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುವ ಆತಂಕಕಾರಿ ಘಟನೆಗಳು ಮುಂದುವರಿದಿವೆ. ಈ ಹಿಂದೆ ದಕ್ಷಿಣ ಬೆಂಗಳೂರು ಹಾಗೂ ಮಾಗಡಿ ರಸ್ತೆಯ ಆಸುಪಾಸಿನಲ್ಲಿ ಚಿರತೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದವು. ಇದೀಗ ನಗರದ ಬಿಇಎಲ್ ಲೇಔಟ್ ಮತ್ತು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ಆತಂಕದಿಂದ ದಿನದೂಡುವಂತಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆ ಸಂಚಾರ
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್ನಲ್ಲಿ ನಿನ್ನೆ ತಡರಾತ್ರಿ ಚಿರತೆಯ ಸಂಚಾರ ಪತ್ತೆಯಾಗಿದೆ. ತಡರಾತ್ರಿ ಸುಮಾರು 3:50 ರ ವೇಳೆಗೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚಿರತೆ, ತದನಂತರ ಮುಂಜಾನೆ 4:30 ರ ಸುಮಾರಿಗೆ ಮತ್ತೊಮ್ಮೆ ಅದೇ ಭಾಗದಲ್ಲಿ ಓಡಾಡಿದೆ. ಚಿರತೆಯು ರಸ್ತೆ ದಾಟುವ ಮತ್ತು ಪಾರ್ಕ್ನೊಳಗೆ ನುಗ್ಗುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ.
ಬೆಳ್ಳಂಬೆಳಗ್ಗೆ ಪಾರ್ಕ್ನಲ್ಲಿದ್ದ ಜನರಿಗೆ ದರ್ಶನ
ಬ್ಯಾಡರಹಳ್ಳಿ ಸಮೀಪದ ಭಾರತ್ನಗರದಲ್ಲಿರುವ ಉದ್ಯಾನವನಕ್ಕೆ ಬೆಳಿಗ್ಗೆ ವಾಕಿಂಗ್ ಬಂದಿದ್ದ ಸಾರ್ವಜನಿಕರಿಗೆ ಚಿರತೆ ದಿಢೀರನೆ ಎದುರಾಗಿದೆ. ಮುಂಜಾನೆಯ ವೇಳೆಯಲ್ಲಿ ಪ್ರತ್ಯಕ್ಷವಾದ ಚಿರತೆಯನ್ನು ಕಂಡು ಬೆಚ್ಚಿಬಿದ್ದ ಸಾರ್ವಜನಿಕರು ಪ್ರಾಣಭಯದಿಂದ ತಕ್ಷಣವೇ ಅಲ್ಲಿಂದ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ. ಚಿರತೆ ಪ್ರತ್ಯಕ್ಷವಾದ ಮಾಹಿತಿ ತಿಳಿಯುತ್ತಿದ್ದಂತೆ ಇಡೀ ಲೇಔಟ್ನಲ್ಲಿ ಜನ ಸಂಚಾರ ವಿರಳವಾಗಿದ್ದು, ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯಿಂದ ಶೋಧ ಕಾರ್ಯ ಚುರುಕು
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಚಿರತೆಯ ಓಡಾಟವನ್ನು ಖಚಿತಪಡಿಸಿಕೊಂಡಿದ್ದಾರೆ. ಸದ್ಯ ಚಿರತೆ ಅಡಗಿರಬಹುದಾದ ಜಾಗಗಳನ್ನು ಗುರುತಿಸಿ, ಅದನ್ನು ಸೆರೆಹಿಡಿಯಲು ಬೋನುಗಳನ್ನು ಇರಿಸುವ ಪ್ರಕ್ರಿಯೆ ಆರಂಭವಾಗಿದೆ. ಕಾರ್ಯಾಚರಣೆ ತೀವ್ರಗೊಳಿಸಿರುವ ಅರಣ್ಯ ಸಿಬ್ಬಂದಿ, ಚಿರತೆ ಸೆರೆಯಾಗುವವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.




