ಪಣತೂರಿನಲ್ಲಿ 45 ಎಕರೆ ವಿಸ್ತೀರ್ಣದ ವೃಕ್ಷೋದ್ಯಾನ ಲೋಕಾರ್ಪಣೆ: ರಾಜಧಾನಿಯಲ್ಲಿ ಮತ್ತಷ್ಟು ಬೃಹತ್ ಉದ್ಯಾನವನ; ರಾಮಲಿಂಗಾರೆಡ್ಡಿ

ಬೆಂಗಳೂರು: ನಗರದ ಪೂರ್ವ ತಾಲೂಕಿನ ವರ್ತೂರು ಹೋಬಳಿಯ ಪಣತೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ನಗರವನ ಯೋಜನೆಯಡಿ 45 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿರುವ ವೃಕ್ಷೋದ್ಯಾನವನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

ಪಣತೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಒಟ್ಟು 145 ಎಕರೆ ಪ್ರದೇಶದಲ್ಲಿ 45 ಎಕರೆ ಜಾಗವನ್ನು ಕ್ವಾಲ್ಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿ ಹಾಗೂ ‘ಸೇಟ್ರೀಸ್’ ಎನ್‌ಜಿಒ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿವಿಧ ಜಾತಿಯ ಮರಗಿಡಗಳು, ಪ್ರಾಣಿ ಹಾಗೂ ಪಕ್ಷಿ ಸಂಕುಲದಿಂದ ಕೂಡಿರುವ ಈ ಪ್ರದೇಶವನ್ನು ಸಾರ್ವಜನಿಕರಿಗೆ ಹಸಿರು ವಾತಾವರಣ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಉಳಿದಿರುವ 100 ಎಕರೆ ಪ್ರದೇಶವನ್ನೂ ಕ್ವಾಲ್ಕಾಮ್ ಸಂಸ್ಥೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. ಅಗತ್ಯವಿರುವಲ್ಲಿ ಅರಣ್ಯ ಇಲಾಖೆಯಿಂದಲೂ ಅನುದಾನ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

₹4.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ವೃಕ್ಷೋದ್ಯಾನವನ್ನು ಸುಮಾರು ₹4.50 ಕೋಟಿ ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿಯಾಗಿ ದೊರೆತಿರುವ ₹1 ಕೋಟಿ ಸಿಎಸ್‌ಆರ್ ಅನುದಾನವನ್ನು ಸ್ಥಳದ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಸಚಿವರು ಸೂಚಿಸಿದರು. ಉದ್ಯಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಬೆಳೆಸುವ ಕಾರ್ಯ ಮುಂದುವರಿಯಬೇಕು ಎಂದರು.

ಬೆಂಗಳೂರಿನಲ್ಲಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಹೊರತುಪಡಿಸಿ ಬೃಹತ್ ಉದ್ಯಾನವನಗಳ ಕೊರತೆ ಇರುವ ಹಿನ್ನೆಲೆಯಲ್ಲಿ ನಗರದ ಇನ್ನೂ ನಾಲ್ಕು ಕಡೆ ಇದೇ ಮಾದರಿಯ ದೊಡ್ಡ ಉದ್ಯಾನವನಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಾರ್ವಜನಿಕರಿಗೆ ಹಲವು ಸೌಲಭ್ಯ

ಪಣತೂರು ವೃಕ್ಷೋದ್ಯಾನದಲ್ಲಿ ಸಾರ್ವಜನಿಕರ ಓಡಾಟಕ್ಕಾಗಿ 2 ಕಿ.ಮೀ. ಇಕೋ ಟ್ರೇಲ್ ನಿರ್ಮಿಸಲಾಗಿದೆ. ನೀರಿನ ಸೌಲಭ್ಯಕ್ಕಾಗಿ ಕೊಳವೆಬಾವಿ, ಪಂಪ್ ಹಾಗೂ ಬೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ವೀಕ್ಷಕರ ವಿಶ್ರಾಂತಿಗಾಗಿ ಪರ್ಗೋಲಾ ಹಾಗೂ ನೀರಿನ ಟ್ಯಾಂಕ್‌ಗಳನ್ನು ಅಳವಡಿಸಲಾಗಿದ್ದು, ಸಸ್ಯ, ಪ್ರಾಣಿ ಮತ್ತು ಪಕ್ಷಿಗಳ ಕುರಿತು ಮಾಹಿತಿ ನೀಡಲು ಕ್ಯೂಆರ್ ಕೋಡ್ ಒಳಗೊಂಡ ನಾಮಫಲಕ ಹಾಗೂ ಜಾಗೃತಿ ಫಲಕಗಳನ್ನು ಸ್ಥಾಪಿಸಲಾಗಿದೆ.

ಇದಲ್ಲದೆ, ತೆರೆದ ಜಿಮ್, ಮಕ್ಕಳ ಆಟದ ಉಪಕರಣಗಳು, ಶೌಚಾಲಯ, ವಾಹನ ನಿಲುಗಡೆ ಪ್ರದೇಶ ಹಾಗೂ ಗಜಿಬೋಗಳನ್ನೂ ನಿರ್ಮಿಸಲಾಗಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಮಂಜುಳಾ ಅರವಿಂದ ಲಿಂಬಾವಳಿ, ಸಿಸಿಎಫ್‌ಗಳಾದ ಮೀನಾಕ್ಷಿ ನೇಗಿ, ಸ್ಮಿತಾ, ಚಕ್ರಪಾಣಿ, ಸಮಾಜ ಸೇವಕಿ ಅನುಪಮಾ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.