2024ನೇ ಸಾಲಿನ 59ನೇ ಜ್ಞಾನಪೀಠ ಪ್ರಶಸ್ತಿಗೆ ಖ್ಯಾತ ಹಿಂದಿ ಬರಹಗಾರ ವಿನೋದ್ ಕುಮಾರ್ ಶುಕ್ಲಾ ಆಯ್ಕೆ

ನವದೆಹಲಿ: ಖ್ಯಾತ ಹಿಂದಿ ಬರಹಗಾರ ವಿನೋದ್ ಕುಮಾರ್ ಶುಕ್ಲಾ ಅವರನ್ನು ಭಾರತದ ಅತ್ಯುನ್ನತ ಸಾಹಿತ್ಯ ಗೌರವವಾದ 59 ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಛತ್ತೀಸ್ ಗಢದ ಮೊದಲ ಬರಹಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

88 ವರ್ಷದ ಸಣ್ಣ ಕಥೆಗಾರ, ಕವಿ ಮತ್ತು ಪ್ರಬಂಧಕಾರ ಜ್ಞಾನಪೀಠ ಪ್ರಶಸ್ತಿ ಪಡೆದ 12 ನೇ ಹಿಂದಿ ಲೇಖಕರಾಗಿದ್ದಾರೆ. ಖ್ಯಾತ ಕಥೆಗಾರ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಪ್ರತಿಭಾ ರೇ ಅವರ ಅಧ್ಯಕ್ಷತೆಯಲ್ಲಿ ನಡೆದ ಜ್ಞಾನಪೀಠ ಆಯ್ಕೆ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ವಿನೋದ್ ಕುಮಾರ್ ಶುಕ್ಲಾ ಛತ್ತೀಸ್‌ಗಢ ರಾಜ್ಯದಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ಲೇಖಕರಾಗಲಿದ್ದಾರೆ. ಹಿಂದಿ ಸಾಹಿತ್ಯ, ಸೃಜನಶೀಲತೆ ಮತ್ತು ವಿಶಿಷ್ಟ ಬರವಣಿಗೆಯ ಶೈಲಿಗೆ ಅವರ ಅತ್ಯುತ್ತಮ ಕೊಡುಗೆಗಾಗಿ ಈ ಗೌರವವನ್ನು ಅವರಿಗೆ ನೀಡಲಾಗುತ್ತಿದೆ” ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.

ಮಾಧವ್ ಕೌಶಿಕ್, ದಾಮೋದರ್ ಮೌಜೋ, ಪ್ರಭಾ ವರ್ಮಾ, ಅನಾಮಿಕಾ, ಎ ಕೃಷ್ಣ ರಾವ್, ಪ್ರಫುಲ್ ಶಿಲೇದಾರ್, ಜಾನಕಿ ಪ್ರಸಾದ್ ಶರ್ಮಾ ಮತ್ತು ಜ್ಞಾನಪೀಠ ನಿರ್ದೇಶಕ ಮಧುಸೂದನ್ ಆನಂದ್ ಸೇರಿದಂತೆ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.

ವಿಶಿಷ್ಟ ಭಾಷಾ ಶೈಲಿ ಮತ್ತು ಭಾವನಾತ್ಮಕ ಆಳಕ್ಕೆ ಹೆಸರುವಾಸಿಯಾದ ಶುಕ್ಲಾ ಅವರು 1999 ರಲ್ಲಿ ತಮ್ಮ ದೀವರ್ ಮೇ ಏಕ್ ಖಿರ್ಕೀ ರಹತಿ ಥಿ ಪುಸ್ತಕಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಅವರ ಇತರ ಗಮನಾರ್ಹ ಕೃತಿಗಳಲ್ಲಿ ಮಣಿ ಕೌಲ್ ಅವರ ಚಲನಚಿತ್ರವಾಗಿ ರೂಪಾಂತರಗೊಂಡ ಕಾದಂಬರಿ ನೌಕರ್ ಕಿ ಕಮೀಜ್ (1979) ಮತ್ತು ಕವನ ಸಂಕಲನ ಸಬ್ ಕುಚ್ ಹೋನಾ ಬಚಾ ರಹೇಗಾ (1992) ಸೇರಿವೆ.