ಕಲಬುರಗಿಯಲ್ಲಿ‌‌ ನೆಲೆಸಿರುವ ಪಾಕ್ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ತುರ್ತು ಕ್ರಮ ಕೈಗೊಳ್ಳಿ: ತೇಲ್ಕೂರ ಆಗ್ರಹ

ಕಲಬುರಗಿ: ಭಾರತ ದೇಶದ ಶಾಂತಿಗೆ ಭಂಗ ತರಲು ಸದಾ ಹವಣಿಸುವ ಪಾಕಿಸ್ತಾನ ವಿರುದ್ದ ಹೋರಾಟ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದು ನಿಜಕ್ಕೂ ತಲೆ ತಗ್ಗಿಸುವ ಹಾಗೂ ನಾಚಿಗೇಡಿತನ ಸಂಗತಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ 26 ಜನರು ಸಾವಿಗೀಡಾಗಿದ್ದರ ವಿರುದ್ಧ ಅದರಲ್ಲೂ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ದ ಮತ್ತು ಆ ದೇಶದ ಧ್ವಜ ರಸ್ತೆಯಲ್ಲಿ ಹಾಕಿ ಪ್ರತಿಭಟನೆಗೆ ಪ್ರೋತ್ಸಾಹಿಸುವುದು ಬಿಟ್ಟು ಹೋರಾಟ ಮಾಡಿದ ಭಜರಂಗದಳ ಸಂಘಟನೆ ಪದಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ? ಇದ್ಯಾವ ದೇಶಪ್ರೇಮ, ಪಾಕ್ ಪರ ಮಾತನಾಡುವ ಹಾಗೂ ಪಾಕ್ ಪರ ಘೋಷಣೆ ಕೂಗುವವರ ವಿರುದ್ದ ಮೊದಲು ಕ್ರಮ ಕೈಗೊಳ್ಳಿ ಎಂದು ತೇಲ್ಕೂರ ಕಿಡಿ ಕಾರಿದ್ದಾರೆ.

ವಾರದಲ್ಲಿ ಎರಡ್ಮೂರು ಭೀಕರ ಕೊಲೆ, ಮಿತಿ ಮೀರಿದ ಪುಂಡರ ಹಾವಳಿ, ಎಲ್ಲೇ ಮೀರಿದ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ನಮ್ಮ ಪೊಲೀಸರು ಪಾಕಿಸ್ತಾನದ ವಿರುದ್ದ ಸಿಡಿದೆದ್ದವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಆಡಳಿತಾರೂಢದ ಕೈಗೊಂಬೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಕ್ ಭಯೋತ್ಪಾದನೆ ಬುಡ ಸಮೇತ ಕಿತ್ತು ಹಾಕಲು ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ತಕ್ಕಪಾಠ ಕಲಿಸಲು ಮುಂದಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಹಿಂದೆಂದಿಗಿಂತಲೂ ಹೆಚ್ಚಿನ ನಿಟ್ಟಿನಲ್ಲಿ ಬೆಂಬಲಿಸಬೇಕಿದೆ ಎಂದಿದ್ದಾರೆ.

ಕಲಬುರಗಿಯಲ್ಲಿ ಅಕ್ರಮವಾಗಿ ನೆಲೆಸಿರುವ ಹಲವಾರು ಪಾಕ್ ಪ್ರಜೆಗಳನ್ನು ಹೊರ ಹಾಕಲು ಈ ಕೂಡಲೇ ಪೊಲೀಸ್ ಇಲಾಖೆ ಮುಂದಾಗಲಿ. ಕಳೆದ 20 ವರ್ಷಗಳಿಂದ ಇಲ್ಲೇ ನೆಲೆಯೂರಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಪೊಲೀಸ್ ಇಲಾಖೆ ಸಹ ಕಾರಣಗಳನ್ನು ನೀಡದೇ ಈಗಲೇ ದೇಶದಿಂದ ಹೊರ ಹಾಕಲು ಮುಂದಾಗಬೇಕೆಂದಿದ್ದಾರೆ.

ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಪರವಾಗಿ ಮೃಧು ಧೋರಣೆ ಯಾವ ಕಾರಣಕ್ಕೂ ಸಲ್ಲದು. ಈ ವಿಷಯದಲ್ಲಿ ಯಾರೇ ಸಮರ್ಥನೆ ಇಲ್ಲವೇ ವಿಷಯಾಂತರ ಮಾಡೋದು ದೇಶದ್ರೋಹದ ಕೆಲಸವಾದಂತೆ. ಹೀಗಾಗಿ ದೇಶ ಭದ್ರತೆ ಗಟ್ಟಿಗೊಳ್ಳಲು ನಾವೆಲ್ಲರೂ ಶುದ್ದ ಮನಸ್ಸಿನಿಂದ ಕೈ ಜೋಡಿಸೋಣ ಎಂದಿದ್ದಾರೆ.