ಚೆನ್ನೈ: ಬೆಂಗಳೂರಿನ ಫ್ಯಾಶನ್ ಡಿಸೈನರ್ ಪಾರ್ವತಿ ಎಂಬುವರು ಬಿಗ್ ಬಾಸ್ ತಮಿಳು ಖ್ಯಾತಿಯ ಹಾಗೂ ಇವಿಪಿ ಮಾಲೀಕ ಸಂತೋಷ್ ರೆಡ್ಡಿ ನಡುವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫ್ಯಾಶನ್ ಡಿಸೈನರ್ ಪಾರ್ವತಿ ದೂರು ದಾಖಲಿಸೋ ಮೊದಲೇ ಸಂತೋಷ್ ರೆಡ್ಡಿ ಅವರ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿರೋದು ಬಹಿರಂಗವಾಗಿದೆ.
ಅವರು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ಮೇಲೆ ಬೆಂಗಳೂರಿನ ಇನ್ಸ್ಟಾಗ್ರಾಮ್ ಖ್ಯಾತಿಯ ಫ್ಯಾಶನ್ ಡಿಸೈನರ್ ಮಹಿಳೆ ಪಾರ್ವತಿ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವು, ತಾವು ಈ ಹಿಂದೆ ದಾಖಲಿಸಿದ್ದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಿಂದ ಪಾರಾಗಲು ರೂಪಿಸಿದ ಸಂಚು ಎಂದು ಆರೋಪಿಸಿದ್ದಾರೆ.
ಪಾರ್ವತಿ ಅವರು ಬೆಂಗಳೂರಿನಲ್ಲಿ ದೂರು ನೀಡುವುದಕ್ಕೂ 8 ದಿನಗಳ ಮೊದಲೇ, ಅಂದರೆ ಸೆಪ್ಟೆಂಬರ್ 17, 2025ರಂದೇ ತಾವು ಚೆನ್ನೈನಲ್ಲಿ ವಂಚನೆ ದೂರು ದಾಖಲಿಸಿದ್ದಾಗಿ ಸಂತೋಷ್ ರೆಡ್ಡಿ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಪಾರ್ವತಿ ವಿರುದ್ಧ ಮೊದಲೇ ದೂರು ದಾಖಲಿಸಿದ್ದ ಸಂತೋಷ್ ರೆಡ್ಡಿ
ನಾನು ಪಾರ್ವತಿ ಮತ್ತು ಅವರ ಸಹಚರರಿಂದ ವಂಚನೆಗೊಳಗಾದ ಬಗ್ಗೆ 2025ರ ಸೆಪ್ಟೆಂಬರ್ 17ರಂದು ಚೆನ್ನೈನ ನಸರತ್ಪೇಟೆ ಪೊಲೀಸ್ ಠಾಣೆ ಮತ್ತು ಆವಡಿ ಪೊಲೀಸ್ ಆಯುಕ್ತರ ಕಚೇರಿಯ ಕೇಂದ್ರ ಅಪರಾಧ ವಿಭಾಗದಲ್ಲಿ ದೂರು ನೀಡಿದ್ದೆ. ನನ್ನ ದೂರಿನ ಅನ್ವಯ, ಪೊಲೀಸರು ಎಫ್ಐಆರ್ ದಾಖಲಿಸಿ, ಪಾರ್ವತಿ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ತನಿಖೆ ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.
ನನ್ನ ದೂರಿನ ಅನ್ವಯ ಪೊಲೀಸರು ವಿಚಾರಣೆಗೆ ಕರೆದಾಗ, ಪಾರ್ವತಿ ಹಾಜರಾಗಲಿಲ್ಲ. ಬದಲಿಗೆ, ಮದ್ರಾಸ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆ ಅರ್ಜಿ ವಜಾಗೊಂಡ ನಂತರ, ತಮ್ಮ ಮೇಲಿನ ವಂಚನೆ ಪ್ರಕರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ನನ್ನ ಮೇಲೆ ಒತ್ತಡ ಹೇರಲು, ಸೆಪ್ಟೆಂಬರ್ 25ರಂದು ಬೆಂಗಳೂರಿನಲ್ಲಿ ನನ್ನ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸಂತೋಷ್ ರೆಡ್ಡಿ ದೂರಿದ್ದಾರೆ.
ವಂಚನೆಯ ವಿವರಗಳು ಬಹಿರಂಗ
ತಮ್ಮ ಮನೆಯ ಶುಭ ಸಮಾರಂಭಕ್ಕೆ ಕಡಿಮೆ ಬೆಲೆಯಲ್ಲಿ ದುಬಾರಿ ವಸ್ತುಗಳನ್ನು ತಂದುಕೊಡುವುದಾಗಿ ಪಾರ್ವತಿ ನಂಬಿಸಿದ್ದರು. ಅವರ ಮಾತನ್ನು ನಂಬಿ, ಬೆಂಗಳೂರಿಗೆ ಹೋಗಿ 1.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿದೆ. ಆದರೆ, ಅವರು ನನಗೆ ವಂಚಿಸಿದ್ದಾರೆ. ನಾನು ನೀಡಿದ ಹಣವನ್ನು ಪಡೆದು ವಸ್ತುಗಳನ್ನು ನೀಡಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಅವರು ಉಡಾಫೆಯಿಂದ ಉತ್ತರಿಸಿ, ನನ್ನ ಕರೆಯನ್ನು ಕಡಿತಗೊಳಿಸಿದರು ಎಂದು ಸಂತೋಷ್ ರೆಡ್ಡಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ದಾಖಲೆಗಳ ಬಿಡುಗಡೆ ಮಾಡಿದ ಸಂತೋಷ್ ರೆಡ್ಡಿ
ತಮ್ಮ ವಾದವನ್ನು ಸಮರ್ಥಿಸಲು, ಸಂತೋಷ್ ರೆಡ್ಡಿ ಚೆನ್ನೈ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದ ಎಫ್ಐಆರ್ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ. ಪಾರ್ವತಿ ಮತ್ತು ಅವರ ಪತಿಯ ಕಂಪನಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಸ್ಟೇಟ್ಮೆಂಟ್ಗಳು ಮದ್ರಾಸ್ ಹೈಕೋರ್ಟ್ನಲ್ಲಿ ಪಾರ್ವತಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಆದೇಶದ ಪ್ರತಿಯನ್ನು ಬಿಡುಗಡೆಗೊಳಿಸಿದ್ದಾರೆ.
ಈ ದಾಖಲೆಗಳ ಬಿಡುಗಡೆಯು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದು, ಸಂತೋಷ್ ರೆಡ್ಡಿ ಅವರ ಮೇಲಿನ ಲೈಂಗಿಕ ಕಿರುಕುಳ ಆರೋಪದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ನಡುವೆ ಚೆನ್ನೈನಲ್ಲಿ ಪಾರ್ವತಿ ವಿರುದ್ಧ ಸಂತೋಷ್ ರೆಡ್ಡಿ ದಾಖಲಿಸಿರುವಂತ ಪ್ರಕರಣ ಮತ್ತು ಬೆಂಗಳೂರು ಪೊಲೀಸರು ಸಂತೋಷ್ ರೆಡ್ಡಿ ವಿರುದ್ದ ದಾಖಲಿಸಿರುವಂತ ಪ್ರಕರಣ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿಯಬೇಕಿದೆ.



