ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಿರಿಯ ರಂಗಕರ್ಮಿ, ನಿರ್ದೇಶಕ, ರಂಗಶಿಕ್ಷಕ ಹಾಗೂ ಚಿಂತಕ ಚಿದಂಬರರಾವ್ ಜಂಬೆ ಅವರು ಶನಿವಾರ ಮಧ್ಯಾಹ್ನ ಸಾಗರದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಕನ್ನಡ ರಂಗಭೂಮಿಯ ಬೆಳವಣಿಗೆಗೆ ಹಲವು ದಶಕಗಳ ಕಾಲ ಮಹತ್ವದ ಕೊಡುಗೆ ನೀಡಿದ್ದ ಜಂಬೆ ಅವರು ನಿರ್ದೇಶನದ ಜತೆಗೆ ರಂಗಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಆಧುನಿಕ ಭಾರತೀಯ ರಂಗಭೂಮಿ ಹಾಗೂ ರಂಗಶಿಕ್ಷಣದ ಪರಂಪರೆಯನ್ನು ಕರ್ನಾಟಕದಲ್ಲಿ ಬೆಳೆಸಿದ ಪ್ರಮುಖ ರಂಗತಜ್ಞರಲ್ಲಿ ಒಬ್ಬರಾಗಿದ್ದರು.

1949ರ ಜನವರಿ 3ರಂದು ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದಲ್ಲಿ ಜನಿಸಿದ ಚಿದಂಬರರಾವ್ ಜಂಬೆ ಅವರು ಕೆಳದಿ ಹಾಗೂ ಸಾಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಉಡುಪಿಯಲ್ಲಿ ಯಕ್ಷಗಾನ ತರಬೇತಿ ಪಡೆದ ಬಳಿಕ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ ರಂಗಭೂಮಿ ಶಿಕ್ಷಣ ಪಡೆದು ಪದವಿ ಪಡೆದಿದ್ದರು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು, ವಿಭಿನ್ನ ಸಾಹಿತ್ಯಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಕೃತಿಗಳನ್ನು ರಂಗಕ್ಕೆ ಅಳವಡಿಸುವ ಮೂಲಕ ಕನ್ನಡ ರಂಗಭೂಮಿಯ ಪ್ರಯೋಗಶೀಲತೆಯನ್ನು ವಿಸ್ತರಿಸಿದರು. ಕಠಿಣ ಶೈಕ್ಷಣಿಕ ಶಿಸ್ತು, ನಿರ್ದೇಶನ ಹಾಗೂ ವಿನ್ಯಾಸದ ಹೊಸ ಸಂವೇದನೆಗಳನ್ನು ಕನ್ನಡ ರಂಗಭೂಮಿಗೆ ಪರಿಚಯಿಸಿದರು.

ಡಾ. ಉಮಾಶ್ರೀ ಸಂತಾಪ

ಚಿದಂಬರರಾವ್ ಜಂಬೆ ಅವರ ನಿಧನಕ್ಕೆ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಹಿರಿಯ ಕಲಾವಿದೆ ಡಾ. ಉಮಾಶ್ರೀ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಂಬೆ ಅವರು ತಮ್ಮ ಪಾಲಿಗೆ ಹಿರಿಯರು ಹಾಗೂ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ನಿರ್ದೇಶನದ ‘ಶ್ರಮಿಷ್ಠೆ’ ನಾಟಕದಲ್ಲಿ ತಾವು ಅಭಿನಯಿಸಿದ್ದು, ಆ ಪಾತ್ರದ ಮೂಲಕ ಇಡೀ ನಾಡಿನಾದ್ಯಂತ ‘ಶ್ರಮಿಷ್ಠೆ’ಯಾಗಿ ಪರಿಚಿತರಾಗಲು ಜಂಬೆ ಅವರ ನಿರ್ದೇಶನ ಪ್ರಮುಖ ಕಾರಣವಾಗಿತ್ತು ಎಂದು ಉಮಾಶ್ರೀ ಸ್ಮರಿಸಿದ್ದಾರೆ.

ಸಮಕಾಲೀನ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ಕೃತಿಗಳನ್ನು ತಲುಪಿಸುವ ಶಕ್ತಿ ಜಂಬೆ ಅವರ ನಿರ್ದೇಶನದಲ್ಲಿತ್ತು. ಕರ್ನಾಟಕದ ರಂಗಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. ಅವರ ನಿಧನದಿಂದ ಕನ್ನಡ ರಂಗಭೂಮಿ ಬಡವಾಗಿದೆ ಎಂದು ಅವರು ಹೇಳಿದ್ದಾರೆ.

ಜಂಬೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಹಾಗೂ ಅಗಲಿದ ಹಿರಿಯ ರಂಗಕರ್ಮಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಡಾ. ಉಮಾಶ್ರೀ ಪ್ರಾರ್ಥಿಸಿದ್ದಾರೆ.