ಲಂಡನ್: ಜನರನ್ನು ವಿಭಜಿಸುವ ಭಿನ್ನಾಭಿಪ್ರಾಯಗಳಿಗಿಂತ ಎಲ್ಲರನ್ನು ಒಗ್ಗೂಡಿಸುವ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಲಂಡನ್ನಲ್ಲಿ ನಡೆದ ‘ಏಕತೆಯ ಆಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ನ 100 ವರ್ಷಗಳ ಪಯಣಕ್ಕೆ ಆಧಾರವಾಗಿರುವ ಪ್ರಮುಖ ಮೌಲ್ಯ ‘ಅಪ್ನಾಪನ್’ ಎಂದು ಹೇಳಿದರು. ವ್ಯಕ್ತಿಗಳು, ಸಮಾಜ ಮತ್ತು ಮಾನವೀಯತೆಯ ಬಗ್ಗೆ ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯೇ ಇದರ ಅರ್ಥ ಎಂದರು.
ವೈವಿಧ್ಯತೆಯಲ್ಲೇ ಏಕತೆ
ಹಿಂದೂ ಚಿಂತನೆಯು ವೈವಿಧ್ಯತೆಯನ್ನು ಒಪ್ಪಿಕೊಂಡು ಗೌರವಿಸುವುದನ್ನು ಪ್ರತಿಪಾದಿಸುತ್ತದೆ ಎಂದು ಭಾಗವತ್ ಹೇಳಿದರು. ಏಕತೆ ಎಂದರೆ ವೈವಿಧ್ಯತೆಯ ಅನುಪಸ್ಥಿತಿ ಅಲ್ಲ. ವಿಭಿನ್ನ ಸಂಪ್ರದಾಯಗಳು, ಜೀವನಶೈಲಿ ಮತ್ತು ನಂಬಿಕೆಗಳನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಬಹುದು ಎಂದರು.

ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯವನ್ನು ಮತ್ತೊಂದು ಶತಮಾನಕ್ಕೆ ವಿಸ್ತರಿಸದೆ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಹಲವು ತಲೆಮಾರುಗಳು ಒಟ್ಟಾಗಿ ಈ ಕಾರ್ಯದಲ್ಲಿ ತೊಡಗಿವೆ ಎಂದರು.
‘ಸೇವೆ ದೇವರಿಗೆ ಹತ್ತಿರವಾಗುವ ಅವಕಾಶ’
ಆರ್ಎಸ್ಎಸ್ನ ಸೇವಾ ಚಟುವಟಿಕೆಗಳ ಕುರಿತು ಮಾತನಾಡಿದ ಭಾಗವತ್, ದೇಶದ ವಿವಿಧ ಭಾಗಗಳಲ್ಲಿ ಸ್ವಯಂಸೇವಕರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಲಡಾಖ್ನಿಂದ ಕನ್ಯಾಕುಮಾರಿವರೆಗೆ ಅಗತ್ಯವಿರುವ ಕಡೆ ಸಂಘ ಸೇವೆ ಮಾಡುತ್ತಿದೆ ಎಂದು ಹೇಳಿದರು.
ಯುವಜನರಿಗೆ ನಿಸ್ವಾರ್ಥ ಸೇವೆಯ ಮಹತ್ವವನ್ನು ವಿವರಿಸಿದ ಅವರು, ಸೇವೆಯನ್ನು ದಾನ ಅಥವಾ ಶ್ರೇಷ್ಠತೆಯ ಪ್ರದರ್ಶನವೆಂದು ನೋಡಬಾರದು. ಬದಲಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ದೇವರಿಗೆ ಹತ್ತಿರವಾಗುವ ಅವಕಾಶವಾಗಿ ಪರಿಗಣಿಸಬೇಕು ಎಂದರು.
#WATCH | Actually, there is no conflict. If British Hindus are good, committed, and true Hindus, there will never be a conflict between British and Bharat interests. If at all that happens, it is obvious that British Hindus will go with Britain. Exceptions may happen, but… pic.twitter.com/K1KWJzWcOw
— DD News (@DDNewslive) September 6, 2026
ಯುವಜನರು ತಮ್ಮದೇ ಆದ ಮಾರ್ಗ ಕಂಡುಕೊಳ್ಳಲು ಹಿರಿಯರು ಅವಕಾಶ ನೀಡಬೇಕು. ತಮ್ಮ ಅಭಿಪ್ರಾಯಗಳನ್ನು ಹೇರದೆ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ರಿಟಿಷ್ ಹಿಂದೂಗಳ ಕುರಿತು ಮಾತನಾಡಿದ ಭಾಗವತ್, ಅವರು ವಾಸಿಸುವ ಹಾಗೂ ಕೆಲಸ ಮಾಡುವ ದೇಶವೇ ಅವರ ‘ಕರ್ಮಭೂಮಿ’. ತಮ್ಮ ಮೂಲ ಮೌಲ್ಯಗಳನ್ನು ಉಳಿಸಿಕೊಂಡೇ ಆ ದೇಶಕ್ಕೆ ಸೇವೆ ಸಲ್ಲಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಬ್ರಿಟನ್ನ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಸುಮಾರು 600 ಮಂದಿ ಭಾಗವಹಿಸಿದ್ದರು. ನೇಪಾಳ ಪ್ರವಾಹ ಸಂತ್ರಸ್ತರಿಗೆ ಮೌನಾಚರಣೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು, ಪರಿಹಾರ ಕಾರ್ಯಗಳಿಗಾಗಿ £1 ಲಕ್ಷ ಸಂಗ್ರಹಿಸಲಾಗಿದೆ ಎಂದು ತಿಳಿಸಲಾಯಿತು.



