ಬೆಂಗಳೂರು: ನಾಳೆ ಮುಡಾ ಕೇಸಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಗೆ ನೋಟಿಸ್ ನೀಡಲಾಗಿತ್ತು. ಈ ಸಮನ್ಸ್ ಗೆ ಮುಂದಿನ ವಿಚಾರಣೆಯವರೆಗೆ ತಡೆಯನ್ನು ನೀಡಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಇಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠದಲ್ಲಿ ಇಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಯಿತು.
ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಪರ ವಕೀಲರ ವಾದ ಆಲಿಸಿದಂತ ನ್ಯಾಯಪೀಠವು ಫೆಬ್ರವರಿ.10ರವರೆಗೆ ಎರಡೂ ಕೇಸ್ ಗಳ ವಿಚಾರಣೆ ಮುಂದೂಡಿಕೆ ಮಾಡಿದೆ. ಅಲ್ಲದೇ ಅಲ್ಲಿಯವರೆಗೆ ಇಡಿ ಸಮನ್ಸ್ ಗೆ ಹೈಕೋರ್ಟ್ ತಡೆಯನ್ನು ನೀಡುವ ಮೂಲಕ, ಬಿಗ್ ರಿಲೀಫ್ ನೀಡಿದೆ.




