ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ನಾಳೆ ದೇಶಾದ್ಯಂತ ‘ಕ್ಯಾಂಡಲ್ ಮಾರ್ಚ್’ಗೆ ಕರೆ ನೀಡಿದ ಕಾಂಗ್ರೆಸ್!

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೆಹಲಿಯಲ್ಲಿ ಕಾಕ್ರೋಚ್ ಜಂಟಾ ಪಾರ್ಟಿ (CJP) ನಡೆಸುತ್ತಿರುವ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಶನಿವಾರ (ಜುಲೈ 25) ದೇಶಾದ್ಯಂತ ‘ಕ್ಯಾಂಡಲ್ ಮಾರ್ಚ್’ (ಮೇಣದಬತ್ತಿ ಮೆರವಣಿಗೆ) ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಶುಕ್ರವಾರ (ಜುಲೈ 24) ‘ಮೋಸ್ಟ್ ಅರ್ಜೆಂಟ್’ (ತೀರಾ ತುರ್ತು) ಸುತ್ತೋಲೆಯನ್ನು ಜಾರಿಗೊಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಕ್ಯಾಂಡಲ್ ಮಾರ್ಚ್ & ಗಾಂಧಿ, ಅಂಬೇಡ್ಕರ್ ಪ್ರತಿಮೆ ಬಳಿ ಸತ್ಯಾಗ್ರಹ:

ಎಐಸಿಸಿ ಜಾರಿಗೊಳಿಸಿರುವ ಸುತ್ತೋಲೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು, ಜಿಲ್ಲೆಗಳು ಹಾಗೂ ಬ್ಲಾಕ್ ಕಮಿಟಿಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಮಧ್ಯಪ್ರದೇಶ ಸೇರಿದಂತೆ ದೇಶದ ಪ್ರತಿಯೊಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ (DCC) ನೇತೃತ್ವದಲ್ಲಿ ಬೃಹತ್ ಮೇಣದಬತ್ತಿ ಮೆರವಣಿಗೆ ಆಯೋಜಿಸಲಾಗುವುದು.

ಈ ಕ್ಯಾಂಡಲ್ ಮಾರ್ಚ್ ಆಯಾ ನಗರಗಳಲ್ಲಿರುವ ಮಹಾತ್ಮ ಗಾಂಧಿ ಅಥವಾ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಬಳಿ ಮುಕ್ತಾಯಗೊಳ್ಳಲಿದ್ದು, ತದನಂತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಮೆಯ ಎದುರು ಕುಳಿತು ಧರಣಿ/ಸತ್ಯಾಗ್ರಹ ನಡೆಸಲಿದ್ದಾರೆ. ಪರೀಕ್ಷಾ ವ್ಯವಸ್ಥೆಯ ಅಕ್ರಮಗಳಿಂದ ತೊಂದರೆಗೊಳಗಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಈ ಹೆಜ್ಜೆ ಇಡಲಾಗುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ:

ನೀಟ್ ಹಾಗೂ ಸಿಬಿಎಸ್‌ಇ (CBSE) ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಂದಾಗಿ ದೇಶದ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಸಂಪೂರ್ಣವಾಗಿ ಕುಸಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ದೆಹಲಿಯಲ್ಲಿ ವಿದ್ಯಾರ್ಥಿ ಚಳವಳಿಯ ಮೇಲೆ ನಡೆದ ಪೊಲೀಸ್ ಕಾರ್ಯಾಚರಣೆಯನ್ನೂ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತ್ತು ವಿದ್ಯಾರ್ಥಿಗಳಲ್ಲಿ ಮತ್ತೆ ವಿಶ್ವಾಸ ಮೂಡಿಸಲು ಶಿಕ್ಷಣ ಸಚಿವರ ಜವಾಬ್ದಾರಿಯನ್ನು ನಿಗದಿಪಡಿಸುವುದು ಅಗತ್ಯವಾಗಿದೆ. ಹೀಗಾಗಿ ಪ್ರತಿಭಟನೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಯನ್ನು ಪ್ರಮುಖವಾಗಿ ಆಗ್ರಹಿಸಲಾಗುವುದು ಎಂದು ತಿಳಿಸಲಾಗಿದೆ.

ಪೋಷಕರು ಮತ್ತು ನಾಗರಿಕ ಸಮಾಜಕ್ಕೆ ಮುಕ್ತ ಆಹ್ವಾನ:

ಈ ರಾಷ್ಟ್ರವ್ಯಾಪಿ ಆಂದೋಲನವನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ತನ್ನ ಎಲ್ಲಾ ಅಂಗಸಂಸ್ಥೆಗಳನ್ನು ಸಕ್ರಿಯಗೊಳಿಸಿದೆ. ರಾಜ್ಯ ಕಾಂಗ್ರೆಸ್ ಸಮಿತಿ (PCC), ಜಿಲ್ಲಾ ಮತ್ತು ಬ್ಲಾಕ್ ಕಮಿಟಿಗಳ ಜೊತೆಗೆ ಯೂತ್ ಕಾಂಗ್ರೆಸ್, ಎನ್‌ಎಸ್‌ಯುಐ (NSUI) ಹಾಗೂ ಎಲ್ಲಾ ವಿಭಾಗಗಳ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ.

ಈ ಪ್ರತಿಭಟನೆಯು ಕೇವಲ ರಾಜಕೀಯ ನಾಯಕರಿಗೆ ಸೀಮಿತವಾಗದೆ, ಅಸಹಾಯಕ ವಿದ್ಯಾರ್ಥಿಗಳು, ಯುವಜನರು, ಪೋಷಕರು ಹಾಗೂ ನಾಗರಿಕ ಸಮಾಜದ (Civil Society) ಪ್ರತಿನಿಧಿಗಳೂ ಸಹ ಕ್ಯಾಂಡಲ್ ಮಾರ್ಚ್‌ನಲ್ಲಿ ಭಾಗವಹಿಸಬೇಕೆಂದು ಕಾಂಗ್ರೆಸ್ ವಿನಂತಿಸಿದೆ.

ಸಂಪೂರ್ಣ ಕಾರ್ಯಕ್ರಮವು ಅತ್ಯಂತ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕೆಂದು ಎಐಸಿಸಿ ನಿರ್ದೇಶಿಸಿದ್ದು, ಜುಲೈ 25ರ ಶನಿವಾರ ದೇಶಾದ್ಯಂತ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಸಾಗಲಿದೆ.