ಬೆಂಗಳೂರು: ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ 3 ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಪಶ್ಚಿಮ ವಲಯದ ವಿವಿಧ ವಾರ್ಡ್ ಗಳಲ್ಲಿ ಸಮಸ್ಯೆಗಳು ಮತ್ತು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ 1ನೇ ಹಾಗೂ 2ನೇ ಜುಲೈ 2025 ರಂದು ನಡೆದ ಸಭೆಯಲ್ಲಿ ನೀಡಿದ ಮಾರ್ಗದರ್ಶನದಂತೆ ಹಾಗೂ 14ನೇ ಜುಲೈ 2025 ರಂದು ಹೊರಡಿಸಿರುವ ಸಭಾ ನಡವಳಿಯಂತೆ ತಮ್ಮ ವಾರ್ಡ್ ವ್ಯಾಪ್ತಿಯ ದೂರುಗಳನ್ನು ಸಹಾಯ 2.0 ತಂತ್ರಾಂಶ (Sahaaya 2.0 App) ದಲ್ಲಿ ಅಪ್ಲೋಡ್ ಮಾಡಿ ನಂತರ ದೂರುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿರುತ್ತದೆ.
ಇಂದು ಮಾನ್ಯ ಮುಖ್ಯ ಆಯುಕ್ತರು ವಾರ್ಡ್-102 ವೃಷಭಾವತಿನಗರ, ಮಹಾಲಕ್ಷ್ಮೀಪುರ ವಿಭಾಗದಲ್ಲಿ ಬೆಳಗ್ಗೆ ನಡಿಗೆ ಮೂಲಕ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ರಸ್ತೆಯಲ್ಲಿ ಇರುವ ಗುಂಡಿಗಳು, ಪಾದಚಾರಿ ಮಾರ್ಗದ ಅಂಚಿನಲ್ಲಿ ತ್ಯಾಜ್ಯ, ಪಾದಚಾರಿ ಮಾರ್ಗದ ಮೇಲೆ ಮನೆ ಕಟ್ಟಡದ ಭಗ್ನಾವಶೇಷಗಳು ಸುರಿದಿರುವುದು ಮತ್ತು ರಸ್ತೆಯ ಬದಿಯಲ್ಲಿ ಘನತ್ಯಾಜ್ಯ, ಒಳಚರಂಡಿ ಸ್ವಚ್ಚಗೊಳಿಸಿರುವುದಿಲ್ಲ. ಅಲ್ಲದೇ ದೂರುಗಳ ವಿಲೇವಾರಿ ಮಾಡಲು ಯಾವುದೇ ರೀತಿಯ ಕ್ರಮವಹಿಸಿರುವುದಿಲ್ಲ ಮತ್ತು ಸಾರ್ವಜನಿಕರು ಸಹ ಈ ಬಗ್ಗೆ ಬಹಳಷ್ಟು ದೂರುಗಳನ್ನು ಹೇಳಿಕೊಂಡಿರುತ್ತಾರೆ.
ಈ ಸಂಬಂಧ ಈಗಾಗಲೇ 14ನೇ ಜುಲೈ 2025 ರಂದು ಹೊರಡಿಸಿರುವ ಸಭಾ ನಡವಳಿಯಲ್ಲಿ ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿ ಪರಿಹರಿಸಲು ಕ್ರಮವಹಿಸುವುದು ಇಲ್ಲದಿದ್ದಲ್ಲಿ ಸಭಾ ನಡವಳಿಯನ್ನೇ ಕಾರಣಕೇಳಿ ಪತ್ರವೆಂಬುದಾಗಿ ಭಾವಿಸಲು ಸೂಚಿಸಲಾಗಿರುತ್ತದೆ. ಸಹಾಯ 2.0 ತಂತ್ರಾಂಶದಲ್ಲಿ ದೂರುಗಳ ಕುರಿತು ಅಪ್ಲೋಡ್ ಮಾಡಲು ತಿಳಿಸಿದ್ದರೂ ನೌಕರರು ಸಹ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ.
ನೌಕರರು ತಮ್ಮ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನ ತೋರಿಸಿರುವುದರಿಂದ ಹಾಗೂ ಸದರಿ ನೌಕರರ ಸೇವೆಯು ತೃಪ್ತಿಕರವಾಗಿರದೇ ಇರುವುದರಿಂದ ಸಾರ್ವಜನಿಕರ ಮತ್ತು ಆಡಳಿತ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಾರ್ಡ್-102 ಕರ್ತವ್ಯದಿಂದ ಬಿಡುಗಡೆಗೊಳಿಸಿ ಪಶ್ಚಿಮ ವಲಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್
ರವರು ಅದೇಶಿಸಿದ್ದಾರೆ.
ಕರ್ತವ್ಯದಿಂದ ಬಿಡುಗಡೆಗೊಳಿಸಿರುವವರ ವಿವರ:
1. ಸಂತೋಷ್, ಸಹಾಯಕ ಅಭಿಯಂತರರು, ಜಲಸಂಪನ್ಮೂಲ ಇಲಾಖೆ.
2. ಚಂದನ ಬಿ.ಎಸ್, ಸಹಾಯಕ ಅಭಿಯಂತರರು, ಜಲಸಂಪನ್ಮೂಲ ಇಲಾಖೆ.
3. ಬಾಬು, ಕಿರಿಯ ಆರೋಗ್ಯ ಪರಿವೀಕ್ಷಕರು (ಗುತ್ತಿಗೆ ಸಿಬ್ಬಂದಿ)




